ಪಣಜಿ: ಡಾಕ್ಟರೇಟ್ ಗೌರವದ ಮೂಲಕ ನನ್ನ ಮೇಲೆ ಇನ್ನೂ ಜವಾಬ್ದಾರಿ ಹೆಚ್ಚುವಂತಾಗಿದೆ. ಗೋವಾದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಮತ್ತು ಕನ್ನಡಿಗರಿಗಾಗಿ ಸದಾ ಹೋರಾಡುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.


ತಮಿಳುನಾಡು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ನಂತರ ಸೋಮವಾರ ಗೋವಾದ ವಾಸ್ಕೊಕ್ಕೆ ಆಗಮಿಸಿದ ಅವರನ್ನು ಗೋವಾ ಕನ್ನಡ ಸಾಹಿತ್ಯ ಪರಿಷತ್ ಘಟಕ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕನ್ನಡಿಗರು ಸ್ವಾಗತ ಕೋರಿ ಬರಮಾಡಿಕೊಂಡರು.


ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧಣ್ಣ ಮೇಟಿ- ಗೋವಾದಲ್ಲಿ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಕೂಡ ನನಸಾಗಬೇಕು. ಈ ನಿಟ್ಟಿನಲ್ಲಿ ನಾನು ಗೋವಾ ಕನ್ನಡಿಗರ ಧ್ವನಿಯಾಗಿ ಹೋರಾಟ ನಡೆಸಲು ಸದಾ ಸಿದ್ಧನಿದ್ದೇನೆ. ಇದೀಗ ಗೌರವ ಡಾಕ್ಟರೇಟ್ ಲಭಿಸಿದ ನಂತರ ನನ್ನ ಮೇಲೆ ಇನ್ನೂ ಹೆಚ್ಚು ಜವಾಬ್ದಾರಿಯಿದೆ. ಇದನ್ನು ನಾನು ಉಳಿಸಿಕೊಂಡು ಹೋಗುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು.  


ನನಗೆ ಲಭಿಸಿದ ಈ ಗೌರವ ಸಮಸ್ತ ಗೋವಾ ರಾಜ್ಯದ ಜನತೆಗೆ ಲಭಿಸಿದ ಗೌರವ ಎಂದು ನಾನು ಭಾವಿಸುತ್ತೇನೆ ಎಂದು ಸಿದ್ಧಣ್ಣ ಮೇಟಿ ಅಭಿಪ್ರಾಯಪಟ್ಟರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter